Wednesday, January 22, 2014

ಸುವರ್ಣ ಸಂಭ್ರಮದಲ್ಲಿ ಕುಂಬಳೆ ಶಾಲೆ :: ಜ.25 ಮತ್ತು 26 ರಂದು ಕಾರ್ಯಕ್ರಮ


ಕಾರ್ಯಕ್ರಮ ಉದ್ಘಾಟಿಸಲಿರುವ ಸ್ಪೀಕರ್ ಕಾಗೋಡು, ಸಮಾರೋಪದಲ್ಲಿ ಸಚಿವ ಕಿಮ್ಮನೆ ಬಾಗಿ
ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ಮಂಜಗಳಲೆ ಗ್ರಾಮದಲ್ಲಿ 50 ವಸಂತ ಪೂರೈಸಿರುವ ಕುಂಬಳೆ ಸರ್ಕಾರಿ ಪ್ರಾಥಮಿಕ ಶಾಲೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು ಗ್ರಾಮಸ್ತರ ಕೂಡುವಿಕೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ ಎಂದು ಸುವರ್ಣ ಮಹೋತ್ಸವ ಕಾರ್ಯದರ್ಶಿ ..ರಾಮಚಂದ್ರ ಮತ್ತು ದೊಡ್ಮನೆ ಲಕ್ಷ್ಮೀನಾರಾಯಣ್ ಹೇಳಿದರು.
1962ರಲ್ಲಿ ಪ್ರಾರಂಭಗೊಂಡ ಕುಂಬಳೆ ಶಾಲೆ ಸುತ್ತಮುತ್ತಲಿನ ಗ್ರಾಮಗಳ ಪಾಲಿಗೆ ವಿದ್ಯಾಕೇಂದ್ರವಾಗಿ ಗಮನಸೆಳೆದು ಸಾವಿರಾರು ವಿದ್ಯಾರ್ಥಿಗಳ ಉತ್ತಮ ಬದುಕಿಗೆ ತನ್ನದೆ ಕೊಡುಗೆ ನೀಡಿ ಗಮನ ಸೆಳೆದಿದೆ ಎಂದರು.
ಸರ್ಕಾರಿ ಶಾಲೆಯೊಂದು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿಂದೆ ಇಡೀ ಊರೆ ಶೃಂಗಾರಗೊಂಡು ಹಬ್ಬವನ್ನಾಗಿ ಆಚರಿಸಬೇಕೆಂಬ ಗ್ರಾಮಸ್ಥರ ಆಶಯದಲ್ಲಿ ವ್ಯವಸ್ಥಿತ ಪೂರ್ವಸಿದ್ದತೆಯಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಿ ಅದಕ್ಕಾಗಿಯೇ ಸುವರ್ಣ ಮಹೋತ್ಸವ ಕ್ರಿಯಾ ಸಮಿತಿ ರಚಿಸಿಕೊಂಡು ಸಿದ್ದತೆ ನಡೆಸಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿ:
ಕುಂಬಳೆ ಶಾಲೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಾಣ, ರಂಗ ಮಂದಿರ,  ಸೇರಿದಂತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ಅಲ್ಲದೆ ಉತ್ಸವಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಗ್ರಾಮಸ್ತರು ಶ್ರಮದಾನದಲ್ಲಿ ಭಾಗವಹಿಸಿದ್ದಾರೆ ಎಂದರು.
ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂಭ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಮಾರೋಪದಲ್ಲಿ ಭಾಗವಹಿಸುವರು, ಮತ್ತು ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಎಲ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಸುವರ್ಣಪುಷ್ಪ ಸ್ಮರಣ ಸಂಚಿಕೆ, ಸೀತಾರಾಮ ಶಂಭು ರಚಿಸಿದ ಎರಡು ಮುತ್ತುಗಳು ಪುಸ್ತಕ ಬಿಡುಗಡೆ,  ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ಮೇಳೈಸಲಿದೆ ಎಂದರು.
ಫೋಟೋ: ಮಾಹಿತಿ : ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ಕುಂಬಳೆ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು.

No comments:

Post a Comment