ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ.. ಒಂದಷ್ಟು ಛಲದೊಂದಿಗೆ ಶ್ರಮದ ಹಾದಿಯಲ್ಲಿ ಗುರಿ ಇಟ್ಟರೇ.. ಯಶಸ್ಸು ಖಂಡಿತ.. ಇವರಿಬ್ಬರು ಅಪರೂಪದ ಅಪೂರ್ವ ಸಹೋದರಿಯರು.. ಚಿಕ್ಕಂದಿನಲ್ಲಿ ಕಿತ್ತು ತಿನ್ನುವ ಬಡತನ.. ಆದರೂ ಹಾಡುವ ಆಸಕ್ತಿ.. ಸಂಗೀತದ ಸಿದ್ದಿ ಎನ್ನುವುದು ಧೈವದತ್ತ ಕೊಡುಗೆ ಅಂತಾರೆ.. ಇಲ್ಲಿ ಬಡವ ಬಲ್ಲಿದ..ಮೇಲುಕೀಳು ಎಂಬ ಬೇಧಗಳು ಸಿಗಬಹುದಾದ ಅವಕಾಶದ ಸಂದರ್ಭದಲ್ಲಿ ಮೇಳೈಸಬಹುದೇ ಹೊರತು.. ಸಿದ್ದಿಯಲ್ಲಿ ಅಲ್ಲ.. ಇದಕ್ಕೊಂದು ಅಪರೂಪದ ಉದಾಹರಣೆ ಈ ಸಹೋದರಿಯರು..
ಹೌದು ತಮ್ಮ ಇಂಪಾದ ಕಂಠಸಿರಿಯ ಹೊತ್ತು ಶಿವಸಂಚಾರದ ಮೂಲಕ ಲೋಕಕ್ಕೆ ಗಾನಸುಧೆ ಹರಿಸಿದ ಈ ಅಪೂರ್ವ ಸಹೋದರಿಯರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರದವರು.. ಚಿಕ್ಕಪೇಟೆಯ ಕರುಣಾಕರ ಮತ್ತು ಮುತ್ತಮ್ಮ ದಂಪತಿಗಳ ಮಕ್ಕಳಾದ ಜ್ಯೋತಿ ಮತ್ತು ದಾಕ್ಷಾಯಿಣಿ ಗಾನಲೋಕದ ಅಪೂರ್ವ ಸಹೋದರಿಯರು..
ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ.. ಚಿಕ್ಕಂದಿನಲ್ಲೇ ಪ್ರತಿಭಾಗಾನ ಆಗಾಗ ಹೊರಹೊಮ್ಮುತ್ತಿತ್ತು.. ಬಡತನದಲ್ಲೂ ಕಷ್ಟಪಟ್ಟು ಸಂಗೀತಭ್ಯಾಸ ಮಾಡಿಕೊಂಡು.. ಸಂಗೀತದ ಒಂದೊಂದೆ ಮಜಲನ್ನು ಏರತೊಡಗಿದರು.. ಭಕ್ತಿಗೀತೆ, ಭಾವಗೀತೆ, ರಂಗಗೀತೆ, ನಾಟಕ, ಕಚೇರಿಯ ಮೂಲಕ ತಮಗೆ ಸಿದ್ದಿಸಿದ ಗಾನವನ್ನು ಶೋತೃಗಳಿಗೆ ಇಂಪಾಗಿ ಉಣಬಡಿಸುತ್ತಲೇ ಪ್ರವರ್ಧಮಾನಕ್ಕೆ ಬಂದರು. ಬಿದನೂರು ಸಹೋದರಿಯರು ಅಂತಲೇ ಪ್ರಖ್ಯಾತಿ ಹೊಂದಿದ ಜ್ಯೋತಿ ಮತ್ತು ದಾಕ್ಷಾಯಿಣಿ..ತಮಗಿದ್ದ ಬಡತನದ ದಾರಿದ್ರ್ಯವನ್ನು ಕಿತ್ತೊಗೆದಿದ್ದು ಮಾತ್ರವಲ್ಲ ಸಂಗೀತ ಶಿಕ್ಷಕರಾಗಿ ಅದೆಷ್ಟೋ ಮಕ್ಕಳಿಗೆ ಸಂಗೀತದ ಧಾರೆ ಎರೆದಿದ್ದಾರೆ..
ನೆರವಿಗೆ ಬಂದ ಸಂಗೀತ ಮಾಷ್ಟ್ರು!
ಚಿಕ್ಕಂದಿನಲ್ಲಿ ಬಡತನದ ಬೇಗೆಯಲ್ಲಿ ಶಿಕ್ಷಣದ ಕಲಿಕೆಯೇ ದುಸ್ತರ ಎಂಬಂತಹ ಸ್ಥಿತಿಯಲ್ಲಿ ..ಇನ್ನು ಸಂಗೀತದ ಆಸಕ್ತಿಗೆ ಪ್ರೋತ್ಸಾಹ ಎಲ್ಲಿಂದ ಸಿಗಬೇಕು.. ಆದರೆ ಇವರಿಬ್ಬರ ಬದುಕಿನಲ್ಲಿ ಹಾಗಾಗಲಿಲ್ಲ.. ಬಿದನೂರು ನಗರದ ಸಂಗೀತ ಮಾಸ್ಟ್ರು ಎಂತಲೇ ಚಿರಪರಿಚಿತರಾದ ಸಂಗೀತ ವಿದ್ವಾನ್ ಬಾಲಕೃಷ್ಣರಾವ್.. ಈ ಮಕ್ಕಳಲ್ಲಿ ಸುಪ್ತವಾಗಿದ್ದ ಸಂಗೀತದ ಪ್ರತಿಭೆಯನ್ನು ಗುರುತಿಸಿ .. ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಗೀತಭ್ಯಾಸ ಮಾಡಿಸಲು ಮುಂದಾದರು. ಇದು ಸಹೋದರಿಯರ ಪಾಲಿಗೆ ವರವಾಗಿ ಪರಿಣಮಿಸಿತು.
ಗುರುಗಳು ಇಟ್ಟ ಭರವಸೆಯನ್ನು ಹುಸಿಗೊಳಿಸದ ಈ ಮಕ್ಕಳು ಹಂತಹಂತವಾಗಿ ಬೆಳೆದರು.. ಮಾತ್ರವಲ್ಲ ಸಂಗೀತವನ್ನೆ ಬದುಕಾಗಿ ಮಾರ್ಪಡಿಸಿಕೊಂಡರು.
ಶಿವಸಂಚಾರ..ಲೋಕಸಂಚಾರ!
ಬಿದನೂನಗರದ ಸಂಗೀತ ಮಾಷ್ಟ್ರು ರವರ ಮಾರ್ಗದರ್ಶನದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ನ್ನು ಪ್ರಥಮಶ್ರೇಣಿಯಲ್ಲಿ ಮುಗಿಸಿದ ಈ ಸಹೋದರಿಯರಿಗೆ ಆಸರೆಯಾಗಿ ನಿಂತಿದ್ದು ಚಿತ್ರದುರ್ಗದ ಮುರುಘಾಮಠ.. ಇಲ್ಲಿಯ ಸಂಗೀತ ನಾಟಕ, ನೃತ್ಯಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿಕೊಂಡ ಬಿದನೂರು ಸಹೋದರಿಯರು ಸೀದಾ ಹೋಗಿದ್ದು ಸಾಣೇಹಳ್ಳಿ ಮಠಕ್ಕೆ.. ಚಿತ್ರದುರ್ಗದ ಮಠದ ಸಂಗೀತ ಶಾಲೆಯ ಪ್ರಾಂಶುಪಾಲರಾಗಿದ್ದ ಅಶೋಕ ಬಾದರದಿನ್ನಿ ಈ ಸಹೋದರಿಯರ ಪ್ರತಿಭೆ ಮನಗಂಡು ಸಾಣೇಹಳ್ಳಿ ಮಠಕ್ಕೆ ಕರೆತಂದು ಅಲ್ಲಿನ ಶ್ರೀಗಳಿಗೆ ಪರಿಚಯಿಸಿದರು.. ಅಲ್ಲಿಂದ ಸಾಣೇಹಳ್ಳಿ ಮಠದ ಯಶಸ್ವಿ ತಿರುಗಾಟ ಕಾರ್ಯಕ್ರಮವಾದ "ಶಿವಸಂಚಾರ" ದ ಕಲಾವಿದರಾಗಿ ಬಿದನೂರು ಸಹೋದರಿಯರು ರೂಪುಗೊಂಡಿದ್ದು ಗಮನಾರ್ಹ.
ಈ ನಡುವೆಯೇ ಹಿಂದೂಸ್ತಾನಿ, ಶಾಸ್ತ್ರೀಯ ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಜ್ಯೋತಿ ಮತ್ತು ದಾಕ್ಷಾಯಿಣಿ ಸಂಗೀತದ ಕೃಷಿಯಲ್ಲಿ ಇನ್ನಷ್ಟು ಪಕ್ವವಾದರು.
ಸಂಗೀತ ಶಿಕ್ಷಕರಾದ ಬಿದನೂರು ಸಹೋದರಿಯರು!
2012 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾಗಿ ಸರ್ಕಾರಿ ವೃತ್ತಿ ಪಡೆದುಕೊಂಡ ಇವರು ಸಂಗೀತದಲ್ಲೇ ತಮ್ಮ ಬದುಕನ್ನು ತೊಡಗಿಸಿಕೊಂಡರು.
ವೃತ್ತಿಯ ನಡುವೆಯೂ ಸಾಣೇಹಳ್ಳಿ ಶಿವಸಂಚಾರದ ಕಲಾವಿದರಾಗಿ ವಚನ ಸಾಹಿತ್ಯವನ್ನು ಲೋಕಕ್ಕೆ ಪ್ರಚುರ ಪಡಿಸುವ ಮೂಲಕ ಮನೆಮಾತಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರರಾಜ್ಯ, ವಿದೇಶದಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿರುವ ಈ ಬಿದನೂರು ಸಹೋದರಿಯರು, ಚಂದನ, ಈಟಿವಿ, ಸುವರ್ಣ ಟಿವಿ ಮತ್ತು ಆಕಾಶವಾಣಿ ಕಾರ್ಯಕ್ರಮದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರೀರ್ವರ ಪ್ರತಿಭೆಗೆ ಸಾಕಷ್ಟು ಸನ್ಮಾನ ಪುರಸ್ಕಾರಗಳು ಅರಸಿಕೊಂಡು ಬಂದಿವೆ.
ಇಂದು ಸಂಗೀತದಲ್ಲಿ ಅದೆಷ್ಟೇ ಕೃಷಿ ಮಾಡಿರಬಹುದು ಆದರೆ ಆರಂಭಿಕವಾಗಿ ಉಚಿತವಾಗಿ ಸಂಗೀತಭ್ಯಾಸ ಮಾಡಿಸಿದ ಬಿದನೂರುನಗರದ ಬಾಲಕೃಷ್ಣರಾವ್ ಮತ್ತು ತಮ್ಮ ಭವಿಷ್ಯ ರೂಪಿಸಿದ ಸಾಣೇಹಳ್ಳಿ ಮಠದ ಸ್ವಾಮೀಜಿಗಳನ್ನು ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ..
![](https://blogger.googleusercontent.com/img/b/R29vZ2xl/AVvXsEga66R6ylOuRw6fEXji72VxHiN7pNKPy4__x_UcAriaIw5q2GQS6r1u9jDtM6hdW9xELSJSsRTkxpybySL5EWMy7zYcEBkYf7Uo_r8o3EeGRrOY0Yym_6c0dh0FBOmCC9syNMAQPgxQ7NZX/s400/IMG-20181001-WA0288.jpg) |
ಸಾಣೇಹಳ್ಳಿ ಶ್ರೀಗಳ ಜೊತೆ |
![](https://blogger.googleusercontent.com/img/b/R29vZ2xl/AVvXsEh_Y5QvqI7ZMZrqUuIUd3xuyPqBhtrdG3jnYNMuNoYwblAuqVKkhMHVZlZj1zNfWoHZSWiYxxFQaX36Fdy7191x_hsGZhwK_velDQP4lq4dUGL_JL4cKW0Cd8b2dZylJb9ugplnvHd4pIoz/s400/IMG_20181001_195055.JPG) |
ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಮುರುಘಾ ಶ್ರೀಗಳೊಂದಿಗೆ |