Tuesday, July 15, 2014

ಬಿದನೂರು ನಗರಕ್ಕೆ ಬರಲು "ಆಪತ್ಪಾಂಧವ" ರೆಡಿ... ಇದು ಜನಾನುರಾಗಿ ದಿ.ರಾಮಯ್ಯರವರ ಕನಸಿನ ಕೂಸು

ನಗರದ ಆಪತ್ಬಾಂಧವ
ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥ ಶೆಟ್ಟಿಯವ ರ ಸ್ಮರಣಾರ್ಥವಾಗಿ ತುರ್ತು ಸೇವೆಗೆ ಸಜ್ಜು
ಬಿದನೂರು: ನಗರ ಭಾಗದ ಜನತೆಗೆ ಸಂತಸದ ಸುದ್ದಿ. ಖ್ಯಾತ ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥ ಶೆಟ್ಟಿ ಸ್ಮರಣಾರ್ಥವಾಗಿ ತುರ್ತುಸೇವೆಯ ಆಶಯದೊಂದಿಗೆ ಆಪತ್ಪಾಂಧವ ಬಿದನೂರು ನಗರಕ್ಕೆ ಬರಲು ಸಜ್ಜುಗೊಂಡಿದೆ.
ಇದರೊಂದಿಗೆ ನಗರದ ಮಾಣಿಕ್ಯ, ಜನಾನುರಾಗಿ ದಿ.ಸಿ.ರಾಮಚಂದ್ರರಾವ್ (ರಾಮಯ್ಯ) ಕನಸು ಕೂಡ ಈಡೇರುವ ಹಂತಕ್ಕೆ ಬಂದಿದೆ.
ಶೆಟ್ಟರ ಸಂಸ್ಮರಣೆ:
ಬಡುಗು ತಿಟ್ಟಿನ ಯಕ್ಷಗಾನ ಲೋಕದ ರಂಗಸ್ಥಳ ರಾಜನಾಗಿ ಮೆರೆದ ದಿ.ನಗರ ಜಗನ್ನಾಥ ಶೆಟ್ಟರು ಅಸ್ತಂಗತರಾಗಿ 10 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸುಮ್ಮನೆ ಕಾರ್ಯಕ್ರಮ ಮಾಡುವುದಕ್ಕಿಂತ ನಗರದ ಬಡ ಕೂಲಿಕಾರ್ಮಿಕರು, ಅಸಹಾಯಕರು, ಒಟ್ಟಾರೆ ಸಮಸ್ತ ಗ್ರಾಮಸ್ತರಿಗೆ ಉಪಯೋಗವಾಗುವ ರೀತಿಯಲ್ಲಿ ಶಾಶ್ವತ ಕಾರ್ಯಕ್ರಮವನ್ನಾಗಿಸಬೇಕು ಎಂಬ ಆಶಯ ಆಯೋಜಕರದ್ದಾಗಿತ್ತು.  ನಗರಕ್ಕೆ ತುರ್ತು ಸೇವೆಗೆ ಅಂಬ್ಯುಲೆನ್ಸ್ ತರಬೇಕು ಎಂದು ಚಿಂತನೆ ಹರಿಬಿಟ್ಟವರು ನಗರದ ರಾಮಯ್ಯ.
ರಾಮಯ್ಯನವರ ಅಧ್ಯಕ್ಷತೆ, ದೇವಗಂಗೆ ಚಂದ್ರಶೇಖರ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ರಚಿತವಾದ ಜಗನ್ನಾಥಶೆಟ್ಟರ ಸಂಸ್ಮರಣಾ ಸಮಿತಿ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಮಾತ್ರವಲ್ಲ ಅಂಬ್ಯುಲೆನ್ಸ್ ತರಲು ವೇದಿಕೆ ಕೂಡ ಸಜ್ಜಾಯಿತು.
ಇದಕ್ಕೆ ನಗರದ ನಾಗರಿಕರು ಕೂಡ  ಆರ್ಥಿಕ ಸಹಕಾರ ನೀಡಿ ಹುರಿದುಂಬಿಸಿದರು. ಹಾಗಾಗಿಯೇ ನಗರ ಹೋಬಳಿಯ ಸಮಸ್ತ ಜನರ ತುರ್ತುಸೇವೆಗೆ ಅಂಬ್ಯುಲೆನ್ಸ್ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಪತ್ಬಾಂಧವನಾಗಿ ನಗರಕ್ಕೆ ಬರಲಿದೆ.
ಆದರೆ ಇದಕ್ಕೆ ಜೀವ ತುಂಬಿದ ರಾಮಯ್ಯ ಇಂದು ನಮ್ಮೊಂದಿಗಿಲ್ಲ ಆದರೆ ಅವರ ಕನಸು ಮತ್ತು ಜಗನ್ನಾಥಶೆಟ್ಟರ ಸಂಸ್ಮರಣೆ ಸಾರ್ಥಕವಾಗುತ್ತಿರುವುದು ಮಾತ್ರ ಸಂತಸದ ವಿಚಾರ
ರಾಮಯ್ಯ ಸಹೋದರ ಸಿ.ಅಜಯ್ ಅಧ್ಯಕ್ಷತೆಯ ಬಿದನೂರು ಸಾಂಸ್ಕೃತಿಕ ವೇದಿಕೆ ಮತ್ತು ನಗರ ಆಸ್ಪತ್ರೆಯ ಸಹಯೋಗದಲ್ಲಿ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸಲು ಸಜ್ಜಾಗಿದೆ.

No comments:

Post a Comment